ಕರ್ನಾಟಕದ ವಾಯುಗುಣ(Karnataka : Climate)

 

• ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ.
• ಅತಿ ಶಾಖ ಮತ್ತು ತೇವಾಂಶವುಳ್ಳ ಬೇಸಿಗೆ ಹಾಗೂ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣ.
• ವಾಯುಗುಣದಲ್ಲಿ ವೈವಿಧ್ಯವಿದೆ. ಇದಕ್ಕೆ ಭೌಗೋಳಿಕ ಸ್ಥಾನ, ಭೂ-ಸ್ವರೂಪ, ಸಸ್ಯವರ್ಗ ಹಾಗೂ ಮಾನ್ಸೂನ್ ಮಾರುತಗಳ ಪ್ರಭಾವವು ಮುಖ್ಯ ಕಾರಣ.
• ಹೀಗಾಗಿ ವಾರ್ಷಿಕ ಉಷ್ನಾಂಶ ಮತ್ತು ಮಳೆಯ ಹಂಚಿಕೆ ರಾಜ್ಯಾದ್ಯಂತ ಒಂದೇ ರೀತಿಯಾಗಿರುವುದಿಲ್ಲ.

ವಾಯುಗುಣದ ಋತುಗಳು


ಭಾರತದಂತೆ ಕರ್ನಾಟಕದ ವಾರ್ಷಿಕ ವಾಯುಗುಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ತಿಳಿಯಬಹುದು.
1) ಬೇಸಿಗೆ ಕಾಲ (ಮಾರ್ಚ್-ಮೇ)
2) ಮಳೆಗಾಲ (ಜೂನ್-ಸೆಪ್ಟೆಂಬರ್)
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್-ನವೆಂಬರ್)
4) ಚಳಿಗಾಲ (ಡಿಸೆಂಬರ್-ಫೆಬ್ರವರಿ)

1. ಬೇಸಿಗೆ ಕಾಲ


• ಈ ಕಾಲದಲ್ಲಿ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ. ಮಾರ್ಚ್ ತಿಂಗಳ ನಂತರ ರಾಜ್ಯಾದ್ಯಂತ ಉಷ್ಣ್ನಾಂಶವು ಏಕಪ್ರಕಾರವಾಗಿ ಹೆಚ್ಚಾಗುತ್ತಾ ಏಪ್ರಿಲ್-ಮೇ ತಿಂಗಳುಗಳಲ್ಲಿ ಅದು ಗರಿಷ್ಠ ಮಟ್ಟವನ್ನು ತಲುಪುವುದು.
• ರಾಯಚೂರಿನಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ಅತಿ ಹೆಚ್ಚು ಉಷ್ಣ್ನಾಂಶವನ್ನು ದಾಖಲಿಸುವ ಪ್ರದೇಶವಾಗಿದೆ.
• ಉತ್ತರ ಮೈದಾನದ ಇತರೆ ಜಿಲ್ಲೆಗಳಲ್ಲಿಯೂ ಉಷ್ಣ್ನಾಂಶ ಹೆಚ್ಚಾಗಿರುತ್ತದೆ.
• ಬೇಸಿಗೆಯಲ್ಲಿ ಅಧಿಕ ಭಾಷ್ಟಿಕರಣದಿಂದ ಮಳೆ ಮೋಡಗಳು ನಿರ್ಮಾಣವಾಗಿ ಗುಡುಗು, ಮಿಂಚು, ಸಿಡಿಲುಗಳ ಅಬ್ಬರದೊಂದಿಗೆ ಪರಿಸರಣ ವಿಧದ ಮಳೆಯಾಗುವುದು. ಕೆಲವೆಡೆ ಆಲಿಕಲ್ಲುಗಳು ಬೀಳುವುದುಂಟು. ಇದು ಕಾಫಿ ಗಿಡಗಳು ಹೂ ಬಿಡಲು ನೆರವಾಗುವುದರಿಂದ ಇದನ್ನು‘ಕಾಫಿ ಹೂ ಮಳೆ’ ಎಂತಲೂ ಹಾಗೂ ಮಾವು ಫಸಲಿಗೆ ನೆರವಾಗುವುದರಿಂದ ಇದನ್ನು ‘ಮಾವಿನ ಹುಯ್ಲು’ಎಂತಲೂ ಕರೆಯುತ್ತಾರೆ. ಈ ಕಾಲದಲ್ಲಿ ರಾಜ್ಯದ ವಾರ್ಷಿಕ ಒಟ್ಟು ಮಳೆಯಲ್ಲಿ ಶೇಕಡ 7 ಭಾಗ ಬೀಳುತ್ತದೆ.

2. ಮಳೆಗಾಲ


• ಇದನ್ನು ‘ನೈಋತ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಕರೆಯುತ್ತಾರೆ.
• ಅರಬ್ಬಿಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆ ಸುರಿಸುತ್ತವೆ.
• ಆಗುಂಬೆ ರಾಜ್ಯದ ಅಧಿಕ ಮಳೆ ಬೀಳುವ ಸ್ಥಳವಾಗಿದೆ. ಇದನ್ನು ದಕ್ಷಿಣದ ಚಿರಾಪುಂಜಿ ಎನ್ನುವರು.
• ಭಾಗಮಂಡಲ ಮತ್ತು ಹುಲಿಕಲ್ಗಳು ಇತರ ಅಧಿಕ ಮಳೆ ಪಡೆಯುವ ಸ್ಥಳಗಳಾಗಿವೆ.
• ಚಿತ್ರದುರ್ಗದ ಚಳ್ಳಕೆರೆ ಸಮೀಪದ ನಾಯಕನ ಹಟ್ಟಿ ಅತಿ ಕಡಿಮೆ ಮಳೆ ಬೀಳುವ ಸ್ಥಳ.
• ಈ ಅವಧಿಯಲ್ಲಿ ರಾಜ್ಯಾದ್ಯಂತ ಉಷ್ಣ್ನಾಂಶ ಹೆಚ್ಚು, ಜೊತೆಗೆ ತೇವಾಂಶವೂ ಹೆಚ್ಚಾಗಿರುತ್ತದೆ.
• ಈ ಋತುಮಾನದಲ್ಲಿ ಕರ್ನಾಟಕಕ್ಕೆ ಶೇಕಡ 80 ರಷ್ಟು ಮಳೆಯಾಗುತ್ತದೆ.

3. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ


• ಇದನ್ನು ‘ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ’ ಎಂತಲೂ ಕರೆಯುತ್ತಾರೆ.
• ಉತ್ತರ ಭಾರತದಲ್ಲಿ ಉಷ್ಣ್ನಾಂಶವು ಕಡಿಮೆಯಾಗಿ ಒತ್ತಡ ಹೆಚ್ಚಾಗುವುದರಿಂದ ನೈಋತ್ಯ ಮಾನ್ಸೂನ್ ಮಾರುತಗಳು ಈಶಾನ್ಯದಿಂದ ನೈಋತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ.
• ಭೂಭಾಗದಿಂದ ಬೀಸುವ ಈ ಮಾರುತಗಳು ಮಳೆ ತರುವುದಿಲ್ಲ. ಆದರೆ ಬಂಗಾಳ ಕೊಲ್ಲಿಯಿಂದ ಬೀಸುವಾಗ ದಕ್ಷಿಣ ಮೈದಾನದ ಜಿಲ್ಲೆಗಳಿಗೆ ಸ್ವಲ್ಪ ಮಳೆ ಬೀಳುತ್ತದೆ.
• ಬಂಗಾಳ ಕೊಲ್ಲಿಯಲ್ಲಾಗುವ ಚಂಡಮಾರುತಗಳ ಪ್ರಭಾವದಿಂದಲೂ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಮಳೆಯಾಗುತ್ತದೆ.
• ಈ ಋತುಮಾನದಲ್ಲಿ ಶೇ.12 ಭಾಗದಷ್ಟು ರಾಜ್ಯದಲ್ಲಿ ಮಳೆಯಾಗುತ್ತದೆ.

4. ಚಳಿಗಾಲ


ಈ ಕಾಲದಲ್ಲಿ ಕಡಿಮೆ ಉಷ್ಣ್ನಾಂಶ , ಕಡಿಮೆ ಆದ್ರ್ರತೆ, ಮಳೆಯೂ ಕಡಿಮೆ ಹಾಗೂ ತಿಳಿಯಾದ ಆಕಾಶವುಳ್ಳ ಹವಾಗುಣವಿರುತ್ತದೆ.ಸರಾಸರಿ ಉಷ್ಣ್ನಾಂಶ 25 ಡಿಗ್ರಿಯಿಂದ 27 ಡಿಗ್ರಿ ಸೆಲ್ಸಿಯಸ್. ಜನವರಿ ಅತಿ ಕಡಿಮೆ ಉಷ್ಣ್ನಾಂಶ ದಾಖಲಾಗುವ ತಿಂಗಳು .ಒಮ್ಮೊಮ್ಮೆ ಪ್ರಾತಃಕಾಲದಲ್ಲಿ ಕಾವಳ ಕಂಡುಬರುವುದು.